ಕಾವೇರಿ ನಮ್ಮದು ನಮ್ಮ ರೈತರಿಗಾಗಿ ಕಾವೇರಿ ನೀರು ಉಳಿಸಿ.
ಕೋಲಾರ ಸೆ 29 :- ರಾಜ್ಯಾದ್ಯಂತ ಶುಕ್ರವಾರ ಕೈಗೊಂಡಿದ್ದ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ವರ್ತಕರ ಸಂಘದವರ ಜೊತೆಗೆ ಕನ್ನಡಪರ ಸಂಘಟನೆಗಳು ಕೈ ಜೋಡಿಸಿ ಸ್ವಯಂ ಪ್ರೇರಿತವಾಗಿ ಕರ್ನಾಟಕ ಬಂದ್ ಗೆ ಉತ್ತಮ ಬೆಂಬಲ ನೀಡುವ ಮುಖಾಂತರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಕೋಲಾರ ಜಿಲ್ಲಾ ಕಾರ್ಯದರ್ಶಿ ಕರವೇ ಶೇಖರ್ ರವರು ನಮ್ಮ ನಾಡು, ನುಡಿ, ಗಡಿ, ಜಲ, ಮಣ್ಣಿನ ವಿಷಯಕ್ಕೆ ಬಂದರೆ ಯಾವುದೇ ಕಾರಣಕ್ಕೂ ನಾವು ರಾಜಿ ಆಗುವುದಿಲ್ಲ. ಎಲ್ಲರೂ ಒಟ್ಟಾಗಿ ನಮ್ಮ ಕಾವೇರಿ ನೀರನ್ನು ಉಳಿಸಿ ನಮ್ಮ ರಾಜ್ಯದ ರೈತರನ್ನು ಉಳಿಸಬೇಕು. ನಮಗೆ ನೀರು ಇಲ್ಲದೆ ಇದ್ದಾಗ ತಮಿಳುನಾಡಿಗೆ ನೀರು ಬಿಡುತ್ತಿರುವುದು ಖಂಡನೀಯವಾಗಿದೆ. ಸರ್ಕಾರ ನಮ್ಮ ರಾಜ್ಯದ ರೈತರಿಗೆ ಬೆಳೆ ಬೆಳೆಯಲು, ಕುಡಿಯಲು ಹಾಗೂ ದಿನ ಬಳಕೆಗೆ ನೀರು ಉಳಿಸುವ ಕೆಲಸ ಮಾಡಬೇಕು. ಮಳೆ ಬಾರದೆ ರೈತರು ಸಂಕಷ್ಟ ದಲ್ಲಿ ಇದ್ದಾರೆ. ಆದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ತಿಳಿಸಿದರು.
ವರ್ತಕರ ಸಂಘದ ಉಪಾಧ್ಯಕ್ಷ ಕೆ ಇ ಬಿ ಚಂದ್ರು ಮಾತನಾಡಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ಕೂಡಲೇ, ನೀರನ್ನು ನಿಲ್ಲಿಸುವ ಕೆಲಸ ಮಾಡಬೇಕು. ನಮ್ಮ ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ತೊಂದರೆಯಲ್ಲಿದ್ದಾರೆ. ಕಾವೇರಿ ನಮ್ಮದು ಯಾವುದೇ ಕಾರಣಕ್ಕೂ ನಾವು ನೀರನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡಲು ಒಪ್ಪುವುದಿಲ್ಲ. ನಮ್ಮ ರೈತರ ಬೆಳೆಗಳಿಗೆ, ಕುಡಿಯಲು, ನೀರು ಬೇಕು ಆದ್ದರಿಂದ ಇಂದು ಅಖಂಡ ಕರ್ನಾಟಕ ಬಂದ್ ಮಾಡಲಾಗಿದೆ ಎಂದರು.
ನರಸಾಪುರ ಗ್ರಾಮದಲ್ಲಿ ವರ್ತಕರ ಸಂಘದವರ ಜೊತೆಗೆ ಕನ್ನಡಪರ ಸಂಘಟನೆಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ನೂರಾರು ರೈತರು, ಕನ್ನಡಪರ ಹೋರಾಟಗಾರರು, ಸಾಮಾನ್ಯ ಜನರು ಒಟ್ಟಿಗೆ ಸೇರಿ ಬಂದ್ ಹಮ್ಮಿಕೊಂಡಿದ್ದು ಕಾವೇರಿ ನಮ್ಮದು,ಕಾವೇರಿ ನಮ್ಮದು ಎಂಬ ಘೋಷಣೆಗಳೊಂದಿಗೆ ಬಂದ್ ಗೆ ಬೆಂಬಲ ನೀಡಿದರು.
ಪ್ರತಿಭಟನೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಓಂ ಪ್ರಕಾಶ್, ಉಪಾಧ್ಯಕ್ಷ ಕೆ ಇ ಬಿ ಚಂದ್ರು, ಗೌರವಾಧ್ಯಕ್ಷ ಭಾನು ಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ವರ್ತಕರ ಸಂಘದ ಸದಸ್ಯರಾದ ಸೂರಿ ನಾರಾಯಣ್,ಕುನರಾಂ, ಎಸ್ ಎಸ್ ಎಸ್ ಶ್ರೀನಾಥ್, ಉಪೇಂದ್ರ, ಎಂ ಟಿ ಬಿ ರಮೇಶ್, ವಿಶ್ವನಾಥ್, ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ಶೇಖರ್, ಎನ್ ಲೋಕೇಶ್, ಶಿಕ್ಷಕರಾದ ಎನ್ ಎಂ ಮುನಿರಾಜು, ಗ್ರಾಮ ಪಂಚಾಯಿತಿ ಸದಸ್ಯ ಹಾಲಿವುಡ್ ಮುನಿರಾಜು, ಯುವ ಮುಖಂಡರಾದ ಪಾನಿಪುರಿ ವೆಂಕಟೇಶ್, ಸತೀಶ್, ಷಣ್ಮುಖ, ಅವಿನಾಶ್, ಗ್ರಾಮ ಪಂಚಾಯಿತಿ ಸದಸ್ಯರು, ವರ್ತಕರ ಸಂಘದ ಸದಸ್ಯರು, ಹಾಗೂ ನರಸಾಪುರ ಗ್ರಾಮಸ್ಥರು ಭಾಗವಹಿಸಿದ್ದರು.

Post Comment