Loading Now

ಇಂಡಿಯಾ ಗ್ಲೋಬಲ್ ಫೋರಂ’ ಸಂವಾದದಲ್ಲಿ ಸಚಿವರ ಬಣ್ಣನೆ.

12 ಲಕ್ಷ ಸಾಫ್ಟ್ವೇರ್ ಎಂಜಿನಿಯರುಗಳ ಬಲದಿಂದ ಬೆಂಗಳೂರಿಗೆ ಸಿಲಿಕಾನ್ ಸಿಟಿ ಹೆಮ್ಮೆ- ಅಶ್ವತ್ಥನಾರಾಯಣ

ಬೆಂಗಳೂರು: ಭಾರತದ ಐಟಿ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ 12 ಲಕ್ಷಕ್ಕೂ ಹೆಚ್ಚು ಸಾಫ್ಟ್ವೇರ್ ಎಂಜಿನಿಯರುಗಳಿದ್ದು, ಇಷ್ಟು ಅಪಾರ ಸಂಖ್ಯೆಯ ಪ್ರತಿಭಾವಂತರು ಹೀಗೆ ಬೇರೆಲ್ಲೂ ಒಂದೇ ನಗರದಲ್ಲಿ ನೆಲೆಗೊಂಡಿಲ್ಲ. ಇಂತಹ ಪ್ರತಿಭಾ ಸಮೃದ್ಧಿಯಿಂದಾಗಿಯೇ ರಾಜ್ಯದ ರಾಜಧಾನಿಯು ಭಾರತದ ಸಿಲಿಕಾನ್ ಕಣಿವೆಯೆಂಬ ಹೆಗ್ಗಳಿಕೆ ಪಡೆದಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಗ್ಲೋಬಲ್ ಫೋರಂ’ ಸಂಘಟನೆಯು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರುಮೇಡ್ ಇನ್ ಕರ್ನಾಟಕ: ಜಾಗತಿಕ ಯೂನಿಕಾರ್ನ್ ಕಂಪನಿಗಳ ತಾಣ’ ಗೋಷ್ಠಿಯಲ್ಲಿ ಅವರು ಪಾಲ್ಗೊಂಡಿದ್ದರು.
ದೇಶದ ಐಟಿ ವಲಯದ ರಫ್ತಿನ ಶೇ.40ರಷ್ಟು ಬೆಂಗಳೂರೊಂದರಿಂದಲೇ ಆಗುತ್ತಿದೆ. ಇದರ ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ ವಲಯದ ಶೇ.50ರಷ್ಟು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಶೇ.41ರಷ್ಟು ಪರಿಣತರು ರಾಜ್ಯದ ರಾಜಧಾನಿಯಲ್ಲೇ ಕಾರ್ಯನಿರತರಾಗಿದ್ದಾರೆ. ಇದಕ್ಕೆ ಪೂರಕವಾಗಿ ಫಾರ್ಚೂನ್ 500 ದರ್ಜೆಯ 400ಕ್ಕೂ ಹೆಚ್ಚು ಕಂಪನಿಗಳು ನಮ್ಮಲ್ಲಿ ನೆಲೆಯೂರಿವೆ ಎಂದು ಅವರು ಅಂಕಿಅಂಶಗಳನ್ನು ಮುಂದಿಟ್ಟರು.
ರಾಜ್ಯದಲ್ಲಿ ಹಿಂದಿನಿಂದಲೂ ಐಟಿ, ಬಿಟಿ, ವಿದ್ಯುಚ್ಚಾಲಿತ ವಾಹನ, ನವೋದ್ಯಮ, ವಿದ್ಯುನ್ಮಾನ, ಅನಿಮೇಷನ್ ಮುಂತಾದ ಆಧುನಿಕ ಔದ್ಯಮಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅತ್ಯುತ್ತಮ ನೀತಿಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಬೆಂಗಳೂರು ಈಗ ದೇಶದ ಯೂನಿಕಾರ್ನ್ ರಾಜಧಾನಿಯಾಗಿಯೂ ಹೊರಹೊಮ್ಮಿದ್ದು, ಇಂತಹ 34 ಕಂಪನಿಗಳು ನಮ್ಮಲ್ಲಿವೆ. ಜತೆಗೆ ದೇಶದಲ್ಲಿರುವ 4 ಡೆಕಾಕಾರ್ನ್ (ತಲಾ 10 ಶತಕೋಟಿ ಡಾಲರ್ ಮೌಲ್ಯವುಳ್ಳ ಕಂಪನಿ) ಕಂಪನಿಗಳ ಪೈಕಿ ಫ್ಲಿಪ್ ಕಾರ್ಟ್, ಸ್ವಿಗ್ಗಿ ಮತ್ತು ಬೈಜೂಸ್ ಬೆಂಗಳೂರಿನಲ್ಲೇ ನೆಲೆಯೂರಿವೆ ಎಂದು ಅವರು ವಿವರಿಸಿದರು.
ಬೆಂಗಳೂರು ಉಜ್ವಲ ಅವಕಾಶಗಳ ನಗರವಾಗಿ ಬೆಳೆದಿರುವುದಕ್ಕೆ ಇಲ್ಲಿನ ಬಹುಸಂಸ್ಕೃತಿಯೂ ಕಾರಣವಾಗಿದೆ. ಜಗತ್ತಿನ ಎಲ್ಲ ದೇಶಗಳ ಜನರೂ ಇಲ್ಲಿದ್ದು, ಸ್ಥಳೀಯರು ಕೂಡ ಇವರೊಂದಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ, ಆರ್ಥಿಕ ಬೆಳವಣಿಗೆಗೆ ಹಿಂದೆಂದೂ ಇಲ್ಲದಂತಹ ಪ್ರಚಂಡ ವೇಗ ದಕ್ಕಿದೆ. ನೀತಿ ನಿರೂಪಕರು, ಶಿಕ್ಷಣ ವ್ಯವಸ್ಥೆ, ಉದ್ಯಮ ರಂಗ ಇಲ್ಲಿ ಒಂದೆಡೆಯಲ್ಲಿದ್ದಾರೆ. ಜತೆಗೆ, ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಂತಹ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಒಡಂಬಡಿಕೆಗಳ ಮೂಲಕ ಹೂಡಿಕೆಯನ್ನು ಆಕರ್ಷಿಸಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಮನದಟ್ಟು ಮಾಡಿಕೊಟ್ಟರು.
ಸಂಶೋಧನೆ ಮತ್ತು ನಾವೀನ್ಯತೆಯನ್ನು ರಾಜ್ಯ ಸರಕಾರವು ಅತ್ಯಂತ ಮಹತ್ವದ ಅಂಗವಾಗಿ ಪರಿಗಣಿಸಿದ್ದು, 20ಕ್ಕೂ ಹೆಚ್ಚು ದೇಶಗಳೊಂದಿಗೆ ಔದ್ಯಮಿಕ ಸಹಭಾಗಿತ್ವವನ್ನು ಹೊಂದಲಾಗಿದೆ. ಅಲ್ಲದೆ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ `ಕರ್ನಾಟಕ ನಾವೀನ್ಯತಾ ಪ್ರಾಧಿಕಾರ’ವನ್ನು ಅಸ್ತಿತ್ವಕ್ಕೆ ತರಲಾಗಿದೆ. ನವೋದ್ಯಮಗಳಿಗೆ ಮಾರುಕಟ್ಟೆ ಲಭ್ಯವಾಗಬೇಕೆಂಬ ದೃಷ್ಟಿಯಿಂದ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಗಿದೆ ಎಂದು ಅವರು ವಿವರಿಸಿದರು.
ಆಧುನಿಕ ತಂತ್ರಜ್ಞಾನಾಧಾರಿತ ಉದ್ದಿಮೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇರುವಷ್ಟು ಉತ್ಕೃಷ್ಟತಾ ಕೇಂದ್ರಗಳೂ ದೇಶದ ಬೇರೆಲ್ಲೂ ಇಲ್ಲ. ಅಲ್ಲದೆ, ಎರಡು ಮತ್ತು ಮೂರನೇ ಸ್ತರದ ನಗರಗಳಲ್ಲಿ ಉದ್ದಿಮೆಗಳು ನೆಲೆಯೂರುವಂತೆ ಮಾಡಲು ವಿಶೇಷ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ಕೊಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ನೂರಾರು ಉದ್ಯಮಿಗಳು ಭಾಗವಹಿಸಿದ್ದ ಈ ಗೋಷ್ಠಿಯಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಪರವಾಗಿ ಲಾರಾ ಬಕ್ವೆಲ್ ಅವರು ಸಂವಾದವನ್ನು ನಡೆಸಿಕೊಟ್ಟರು.

Post Comment

You May Have Missed