Loading Now

14 ಗ್ರಾಮಗಳನೀರಿನ ಬವಣೆ

ಚಿಕ್ಕಬಳ್ಳಾಪುರ, ಫೆಬ್ರವರಿ 9, ಬುಧವಾರ :

ಮಂಡಿಕಲ್ಲು ಗ್ರಾಮ ಪಂಚಾಯಿತಿಯ 14 ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಯೋಜನೆ, ಸಂಪುಟ ಅನುಮೋದನೆ

ಗ್ರಾಮೀಣ ಜನರ ದಶಕಗಳ ಬೇಡಿಕೆ ಈಡೇರಿಸಿದ ಸಚಿವರು, 2023 ರ ವೇಳೆಗೆ ನೀರು ಪೂರೈಕೆ

ಚಿಕ್ಕಬಳ್ಳಾಪುರ, ಫೆಬ್ರವರಿ 9, ಬುಧವಾರ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲು ಹಾಗೂ ಸುತ್ತಮುತ್ತಲಿನ ಗ್ರಾಮಗಳ ದಶಕಗಳ ಬೇಡಿಕೆ ಈಗ ಈಡೇರಿದೆ. ಈ ಗ್ರಾಮಗಳ ಜನರ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ‘ಭಗೀರಥ ಹೆಜ್ಜೆ’ ಇರಿಸಿರುವ ಚಿಕ್ಕಬಳ್ಳಾಪುರ ಶಾಸಕ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಯದಾರ್ಲಹಳ್ಳಿ ಕೆರೆಯ ಮೂಲಕ ನೀರು ಹರಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಕೊಡಿಸಿ, ಕಾಮಗಾರಿಗೆ ಸುಗಮ ಹಾದಿ ನಿರ್ಮಿಸಿದ್ದಾರೆ.

ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಗ್ರಾಮಗಳ ಕನಸು ಈ ಮೂಲಕ ಸಾಕಾರಗೊಂಡಿದೆ. ಇದೇ ಜಿಲ್ಲೆಯಲ್ಲೇ ಹುಟ್ಟಿ ಬೆಳೆದ ಸಚಿವ ಡಾ.ಕೆ.ಸುಧಾಕರ್, ಮಂಡಿಕಲ್ಲು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಕುಡಿಯುವ ನೀರಿನ ಬೇಡಿಕೆ ಕುರಿತು ಅರಿತಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೊಳಾಯಿ ಸಂಪರ್ಕ ಕಲ್ಪಿಸಿ ನೀರೊದಗಿಸುವ ಜಲಜೀವನ್ ಮಿಷನ್ ಜಾರಿ ಮಾಡಿದ್ದಾರೆ. ಇದೇ ಯೋಜನೆಯಡಿ, 14 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 15.48 ಕೋಟಿ ರೂ. ವೆಚ್ಚದ ಯೋಜನೆ ಕುರಿತು ಚರ್ಚೆಯಾಗಿದ್ದು, ಬಳಿಕ ಅನುಮೋದನೆ ದೊರೆತಿದೆ.

2024 ರ ವೇಳೆಗೆ ದೇಶದ ಪ್ರತಿ ಮನೆಗೆ ಕೊಳಾಯಿ ನೀರು ಸೌಲಭ್ಯ ಕಲ್ಪಿಸುವುದು ಜಲಜೀವನ್ ಯೋಜನೆಯ ಗುರಿ. ಈ ಗುರಿ ತಲುಪಲು ಸಚಿವ ಡಾ.ಕೆ.ಸುಧಾಕರ್ ಅವರು ಈ ಯೋಜನೆ ಜಾರಿ ಮಾಡಿದ್ದಾರೆ. ಈಗಾಗಲೇ ಸಚಿವರ ಶ್ರಮದಿಂದ ಎಚ್.ಎನ್. ವ್ಯಾಲಿ ಯಿಂದ ಕೆರೆಗಳನ್ನು ತುಂಬಿಸಲಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುವುದರೊಂದಿಗೆ, ರೈತರಿಗೆ ಕೃಷಿ ಚಟುವಟಿಕೆ ನಡೆಸಲು ನೀರಾವರಿಯ ಸಮಸ್ಯೆಯೂ ನೀಗಿದೆ. ಇದರ ಮುಂದಿನ ಭಾಗವಾಗಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಪೂರೈಸುವ ಕಾರ್ಯದ ಕಡೆಗೆ ಸಚಿವ ಡಾ.ಕೆ.ಸುಧಾಕರ್ ಹೆಜ್ಜೆ ಇರಿಸಿದ್ದಾರೆ.

ಜಲಜೀವನ್ ಮಿಷನ್ ನಡಿ ಜಾರಿ

ಜಲಜೀವನ್ ಮಿಷನ್ ನಲ್ಲಿ ಎಲ್ಲಾ ಮನೆಗಳಲ್ಲಿ ಕೊಳಾಯಿ ಸೌಲಭ್ಯ ಕಲ್ಪಿಸಿ ಕುಡಿಯುವ ನೀರು ಪೂರೈಸಲಾಗುತ್ತದೆ. ಇದೇ ಯೋಜನೆಯಡಿ, ಯದಾರ್ಲಹಳ್ಳಿ ಕೆರೆಯಿಂದ ನೀರು ಪಡೆದು ಪೂರೈಸಲಾಗುತ್ತದೆ. ಸದ್ಯ ಈ ಗ್ರಾಮಗಳಲ್ಲಿ ಒಟ್ಟು 1,420 ಮನೆಗಳು ಹಾಗೂ 5,251 ಜನರಿದ್ದಾರೆ. 2053 ರ ವೇಳೆಗೆ ಈ ಜನಸಂಖ್ಯೆ 6,357 ಆಗಲಿದೆ. ಈ ಅಂದಾಜು ಗಮನದಲ್ಲಿರಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈವರೆಗೆ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಬಾವಿ, ಕೆರೆ ಹಾಗೂ ಬೋರ್ ವೆಲ್ ಆಶ್ರಯಿಸಿದ್ದರು. ಜನರು ನೀರು ಪಡೆಯಲು ಕೆರೆ, ಬಾವಿಗಳ ಬಳಿ ಹೋಗಿ ಬರಬೇಕಿತ್ತು. ಈ ಸಂಕಷ್ಟವನ್ನು ತಪ್ಪಿಸಿ ಮನೆಗಳಿಗೆ ನೇರವಾಗಿ ಕೊಳಾಯಿಯಲ್ಲಿ ನೀರು ಬರುವಂತೆ ಸೌಲಭ್ಯ ಕಲ್ಪಿಸಲಾಗುತ್ತದೆ.

ಯದಾರ್ಲಹಳ್ಳಿ ಕೆರೆ

ದಕ್ಷಿಣ ಪೆನ್ನಾರ್ ನಿಂದ ನೀರು ಪಡೆಯುವ ಯದಾರ್ಲಹಳ್ಳಿ ಕೆರೆ 101.31 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, 30.40 ಹೆಕ್ಟೇರ್ ನಲ್ಲಿ ನೀರಿದೆ. ಈ ಕೆರೆ ಒಟ್ಟು 27.63 ಎಂಸಿಎಫ್‍ಟಿ ಸಾಮರ್ಥ್ಯ ಹೊಂದಿದೆ. ಇಲ್ಲಿ ನೀರನ್ನು ಶುದ್ಧೀಕರಿಸುವ ಘಟಕಗಳನ್ನು ಅಳವಡಿಸಿ, ಕುಡಿಯುವ ನೀರಿನ ಮಟ್ಟಕ್ಕೆ ನೀರನ್ನು ಶುದ್ಧ ಮಾಡಿ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ ಕೆರೆಯ ಬಳಿಯಲ್ಲೇ ಶುದ್ಧೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ, 2023 ರ ವೇಳೆಗೆ ಮನೆಗಳಿಗೆ ನೀರು ಪೂರೈಸಲಾಗುತ್ತದೆ.

ಕೋಟ್

ಎಚ್.ಎನ್.ವ್ಯಾಲಿಯಿಂದ ಕೆರೆಗಳ ಭರ್ತಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮೊದಲಾದ ಜಲ ಪೂರೈಕೆ ಯೋಜನೆಗಳ ಮುಂದುವರಿದ ಭಾಗವಾಗಿ, ಯದಾರ್ಲಹಳ್ಳಿ ಕೆರೆಯಿಂದ ನೀರು ಪಡೆದು, ಕೊಳಾಯಿಗಳಲ್ಲಿ ಮನೆಮನೆಗೆ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಸ್ವಾತಂತ್ರ ಬಂದು 75 ವರ್ಷಗಳಾದರೂ ಎಲ್ಲಾ ಮನೆಗಳಿಗೆ ಕೊಳಾಯಿ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂಬುದು ಜ್ವಲಂತ ಸಮಸ್ಯೆ. ಈ ಸಮಸ್ಯೆಗೆ ಆದ್ಯತೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಜಲಜೀವನ್ ಮಿಷನ್ ನಿಂದ ಮನೆಗೆ ನೇರವಾಗಿ ನೀರು ಪೂರೈಸುವ ಗುರಿಯನ್ನು ಜವಾಬ್ದಾರಿಯುತ ರಾಜ್ಯ ಸರ್ಕಾರಗಳಿಗೆ ನೀಡಿದ್ದಾರೆ. ಆ ಕನಸನ್ನು ಸಾಕಾರಗೊಳಿಸುವತ್ತ ನಾವು ಸಾಗಿದ್ದೇವೆ.
-ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು

ಗ್ರಾಮಗಳು ಯಾವುವು?

ಬಚ್ಚೇನಹಳ್ಳಿ, ದರಬೂರು, ಗುಡಿಸಿಹಳ್ಳಿ, ನೆಲಮಾನಪರ್ತಿ, ಗುಂಡ್ಲಮಂಡಿಕಲ್ಲು, ಮಣಿಪುರ, ಹೊಸಹಳ್ಳಿ, ಮಂಡಿಕಲ್ಲು, ಯಾಟಗಾನಹಳ್ಳಿ, ಪಾರೇನಹಳ್ಳಿ, ಪೈಯೂರು, ಯದಾರ್ಲಹಳ್ಳಿ, ಜೀಡಮಾಕಲಹಳ್ಳಿ, ಯರ್ರಬಾಪನಹಳ್ಳಿ

ಪ್ರಮುಖಾಂಶಗಳು

ವೆಚ್ಚ: 15.48 ಕೋಟಿ ರೂ.
ಮನೆಗಳು: 1,420
ನೀರಿನ ಬೇಡಿಕೆ: 0.43 ಎಂಎಲ್‍ಡಿ
ಪ್ರಸ್ತುತ ಫಲಾನುಭವಿಗಳು: 5,251
ಪೂರೈಸುವ ನೀರು: 55 ಎಲ್‍ಪಿಸಿಡಿ
ಕಾಮಗಾರಿ ಪೂರ್ಣ ಹಾಗೂ ನೀರು ಪೂರೈಕೆ ಆರಂಭ: 2023 ರಲ್ಲಿ
ಪೈಪ್ ಅಳವಡಿಕೆ: 23,345 ಮೀಟರ್ ಉದ್ದ
ಶುದ್ಧಿಕರಣ ಘಟಕದ ಸಾಮರ್ಥ್ಯ : 0.43 ಎಂಎಲ್‍ಡಿ
ಸಮಾನಾಂತರ ಜಲಾಶಯದ ಸಾಮರ್ಥ್ಯ: 2 ಲಕ್ಷ ಲೀಟರ್

Post Comment

You May Have Missed