Loading Now

ಮಂಡ್ಯದ ಕರ್ನಾಟಕ ಸಂಘ ಪ್ರಕಟಿಸಿರುವ ನಾಲ್ಕು ಕೃತಿಗಳ ಬಿಡುಗಡೆ

ಮಂಡ್ಯ: ಕೇವಲ ವ್ಯವಸಾಯವನ್ನು ಆಧರಿಸಿರುವ ಜಿಲ್ಲೆಯಲ್ಲಿ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಉದ್ಯೋಗಸೃಷ್ಟಿಗೆ ಒತ್ತು ಕೊಟ್ಟು, ಹೊಸ ಸಂಸ್ಕೃತಿಯನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲ್ಲಿನ ಕರ್ನಾಟಕ ಸಂಘವು ಪ್ರಕಟಿಸಿರುವ ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಿ, ಶುಕ್ರವಾರದಂದು ಮಾತನಾಡಿದ ಅವರು, `ಜಿಲ್ಲೆಯು ಒಂದು ಕಾಲಕ್ಕೆ ಸಮೃದ್ಧಿಗೆ ಹೆಸರಾಗಿತ್ತು. ಆದರೆ, ಸಮಕಾಲೀನ ಪ್ರವೃತ್ತಿಗಳನ್ನು ಗ್ರಹಿಸದೆ ಹೋಗಿದ್ದರಿಂದ ಕಾಲಕ್ರಮೇಣ ಹತ್ತಾರು ಸಾಮಾಜಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದೆ’ ಎಂದರು.

ಕಾರ್ಯಕ್ರಮದಲ್ಲಿ ಎಂ.ಯು.ಶ್ವೇತಾ ಅವರ ಕನ್ನಡ ಸಾಹಿತ್ಯ ಶಾಸ್ತ್ರ ಸಂಗಾತಿ’, ಕೆ.ಟಿ.ಶ್ರೀಕಂಠೇಗೌಡರಮೈಶುಗರ್ ಮತ್ತು ಮೇಕೆದಾಟು ಹೋರಾಟ’, ಡಾ.ಕೆ.ಆರ್. ಸಂಧ್ಯಾ ರೆಡ್ಡಿ ಅವರು ಕನ್ನಡಕ್ಕೆ ಅನುವಾದಿಸಿರುವ ಫಿನ್ಲೆಂಡಿನ ಜನಪದ ಮಹಾಕಾವ್ಯ ಕಲೆವಲ’ ಮತ್ತು ಸಾತನೂರು ವೇಣುಗೋಪಾಲ್ ಅವರ ಕಾದಂಬರಿಸಾದರದಾಚೆ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕರ್ನಾಟಕ ಸಂಘವು ತನ್ನ ಅರ್ಥಪೂರ್ಣ ಕೆಲಸಗಳಿಂದ ದಾಖಲೆಗಳನ್ನು ಸ್ಥಾಪಿಸಿದೆ. ಇಲ್ಲಿ ಅಗತ್ಯ ಸಭಾಂಗಣ ಮತ್ತು ಕಲಾ ಮಂದಿರವನ್ನು ನಿರ್ಮಿಸಲು ಸರಕಾರದ ವತಿಯಿಂದ ಅಗತ್ಯ ನೆರವು ಕೊಡಲಾಗುವುದು. ಇದನ್ನು ಸಮರ್ಥವಾಗಿ ಮುಂದುವರಿಸಿಕೊಂಡು, ಆರೋಗ್ಯಕರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.

ಭಾಷೆ ಮತ್ತು ತಂತ್ರಜ್ಞಾನ ಎರಡೂ ಜತೆಯಲ್ಲಿ ಸಾಗುತ್ತಿರುತ್ತವೆ. ತಂತ್ರಜ್ಞಾನವನ್ನು ಬಳಸಿಕೊಂಡು ಭಾಷೆಯ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಜನಪದ ವಿಶ್ವವಿದ್ಯಾಲಯದಿಂದ ಜಾನಪದ ನಿಘಂಟನ್ನು ಹೊರತರಲು ಕೂಡ ಸಹಾಯ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಕರ್ನಾಟಕ ಸಂಘವು ಪುಸ್ತಕ ಪ್ರಕಟಣೆಯಲ್ಲಿ ಹೆಜ್ಜೆ ಗುರುತು ಮೂಡಿಸಿರುವುದು ಸ್ವಾಗತಾರ್ಹವಾಗಿದೆ. ಅದರಲ್ಲೂ ಜಾನಪದಕ್ಕೂ ಜನ ಸಮುದಾಯಗಳಿಗೂ ಒಂದು ಸಾವಯವ ಸಂಬಂಧ ಇದ್ದೇ ಇರುತ್ತದೆ. ಮಂಡ್ಯದಲ್ಲಿ ಕೃಷಿಯ ಜತೆಗೆ ಸಾಹಿತ್ಯ ಮತ್ತು ಸಂಸ್ಕೃತಿಗಳ ಕಡೆಗೂ ಗಮನ ಹರಿಸಿ, ಅವುಗಳನ್ನು ಪೋಷಿಸಬೇಕು ಎಂದು ಸಚಿವರು ನುಡಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆರಂಭದಿಂದಲೇ ಭಾಷೆಯ ಕಲಿಕೆಗೆ ಒತ್ತು ಕೊಡಲಾಗಿದೆ. ಏಕೆಂದರೆ, ಭಾಷೆ ಇಲ್ಲದೆ ಮನುಷ್ಯನ ಅಸ್ತಿತ್ವವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಭಾಷೆಯ ಸರಿಯಾದ ಕಲಿಕೆಯ ಜತೆಜತೆಗೆ ಉಳಿದ ಜ್ಞಾನಧಾರೆಗಳನ್ನು ಸಮರ್ಥವಾಗಿ ಮತ್ತು ವೈಜ್ಞಾನಿಕವಾಗಿ ಕಲಿಯಬಹುದು ಎಂದು ಅಶ್ವತ್ಥನಾರಾಯಣ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪ್ರೊ.ಜಯಪ್ರಕಾಶ ಗೌಡ, ಆರ್. ರಘುನಂದನ್, ಆದಾಯ ತೆರಿಗೆ ಇಲಾಖೆಯ ಉನ್ನತಾಧಿಕಾರಿ ಮತ್ತು ಲೇಖಕ ಜಯರಾಂ ರಾಯಪುರ, ಅಮೆರಿಕದ `ಅಕ್ಕ’ ಸಂಘಟನೆಯ ಅಧ್ಯಕ್ಷ ಅಮರನಾಥ ಗೌಡ ಉಪಸ್ಥಿತರಿದ್ದರು.

Post Comment

You May Have Missed