Loading Now

“ಬನಾರಸ್” ನಿಂದ “ಮಾಯಾಗಂಗೆ”

ಭಾರತದ ಪುಣ್ಯಕ್ಷೇತ್ರಗಳಲ್ಲಿ ಕಾಶಿಗೆ ವಿಶೇಷ ಸ್ಥಾನ.‌ ಕಾಶಿಯನ್ನು “ಬನಾರಸ್” ಅಂತಲೂ ಕರೆಯುವುದು ವಾಡಿಕೆ. ಪರಮಪಾವನೆಯಾದ ಗಂಗೆ “ಬನಾರಸ್” ನಲ್ಲಿ ಹರಿದು ಎಷ್ಟೋ ಜನರ ಪಾಪ ಕಳೆಯುತ್ತಿದ್ದಾಳೆ‌.

ಈ ಪವಿತ್ರ ನಗರದ ಹೆಸರಿನಲ್ಲಿ “ಬನಾರಸ್” ಎಂಬ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗಿದೆ.
ಸದ್ಯದಲ್ಲೇ ತೆರೆಗೆ ಬರಲಿದೆ.

ಜಯತೀರ್ಥ ನಿರ್ದೇಶನದಲ್ಲಿ ಝೈದ್ ಖಾನ್ ಹಾಗೂ ಸೋನಾಲ್ ಮೊಂತೆರೊ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದ ಮೊದಲ ಹಾಡು “ಮಾಯಾಗಂಗೆ” ಇತ್ತೀಚೆಗೆ ಬಿಡುಗಡೆಯಾಗಿದೆ. ಕನ್ನಡ ಹಾಗೂ ಮಲೆಯಾಳಂ ಭಾಷೆಯ ಹಾಡುಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಯಿತು.

ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ ಈ “ಮಾಯಾಗಂಗೆ” ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮಲೆಯಾಳಂ ನಲ್ಲಿ ಆದಿ ಈ ಹಾಡನ್ನು ಬರೆದಿದ್ದಾರೆ. ನಿರ್ಮಾಪಕಿ ಶೈಲಜಾನಾಗ್ ಈ ಹಾಡನ್ನು ಬಿಡುಗಡೆ ಮಾಡಿದರು. ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್ ಹಾಗೂ ಯಶಸ್ ಸೂರ್ಯ, ಲಹರಿ ವೇಲು, ಚಂದ್ರು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಝೈದ್ ಖಾನ್ ಸೇರಿದಂತೆ ಇಡೀ ತಂಡಕ್ಕೆ ಶುಭ ಕೋರಿದರು.

ಕಾಶಿ ವೈರಾಗ್ಯದ ಸಂಕೇತ ಅಲ್ಲಿ ಪ್ರೀತಿಯ ಕಥೆ ಬರೆಯಲು ನನ್ನ ಗೆಳೆಯ ಜಯತೀರ್ಥ ನಿಗೆ ಮಾತ್ರ ಸಾಧ್ಯ. ಪಕ್ಕದಲ್ಲೇ ಚಿತೆ ಉರಿಯುತ್ತಿರುತ್ತದೆ. ಅಲ್ಲಿ ನಾಯಕ- ನಾಯಕಿ ಪ್ರೇಮ ಆರಂಭವಾಗುತ್ತದೆ ಈ ಸನ್ನಿವೇಶಕ್ಕೆ ತಕ್ಕ ಹಾಡು ಬರೆಯಬೇಕು. ಇದು ಮಾಮೂಲಿ ಪ್ರೇಮಗೀತೆಯ ತರಹ ಬೇಡ ಎಂದು ಜಯತೀರ್ಥ ವಿವರಿಸಿದಾಗ, ಈ “ಮಾಯಾಗಂಗೆ” ಹಾಡು ಬರೆದೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಅದ್ವೈತ ಛಾಯಾಗ್ರಹಣ ಹಾಡಿನ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ಡಾ||ವಿ.ನಾಗೇಂದ್ರಪ್ರಸಾದ್.

“ಬನಾರಸ್” ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ. ಇಂತಹ ಅದ್ಭುತ ಹಾಡನ್ನು ಬರೆದಿರುವ ನಾಗೇಂದ್ರಪ್ರಸಾದ್ ಅವರಿಗೆ ಧನ್ಯವಾದ. ಝೈದ್ ಖಾನ್ ಈ ಹಾಡಿನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರೆ. ಜಯತೀರ್ಥ ಅವರ ನಿರ್ದೇಶನ ಉತ್ತಮವಾಗಿದೆ. ಮುಂದೆ ಇನ್ನೂ ಮೂರು ಹಾಡುಗಳು ಬಿಡುಗಡೆಯಾಗಲಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್.

ನಾನು ನಾಗೇಂದ್ರಪ್ರಸಾದ್ ಅವರಿಗೆ ಈ ಹಾಡಿನ ಸನ್ನಿವೇಶ ವಿವರಿಸಿದೆ. ನನಗೆ ಮಾಮೂಲಿ ತರಹದ ಪ್ರೇಮಗೀತೆ ಬೇಕಿರಲಿಲ್ಲ. ಇದು ಕೊರಿಯೋಗ್ರಾಫರ್ ಸಾಂಗ್ ಕೂಡ ಅಲ್ಲ. ನಾವೊಂದಿಷ್ಟು ಜನ ಸೇರಿ ಈ ಹಾಡು ಹೀಗೆ ಬರಬೇಕು ಅಂದುಕೊಂಡೆವು. ಅದೇ ರೀತಿ ನಾಗೇಂದ್ರಪ್ರಸಾದ್ ಅದ್ಭುತವಾಗಿ ಹಾಡು ಬರೆದುಕೊಟ್ಟಿದ್ದಾರೆ. ಅಜನೀಶ್ ಅಷ್ಟೇ ಸೊಗಸಾಗಿ ಸಂಗೀತ ನೀಡಿದ್ದಾರೆ. ಅದ್ವೈತ ಅಂದವಾಗಿ ಛಾಯಾಗ್ರಹಣ ಮಾಡಿದ್ದಾರೆ. ಕನ್ನಡ ಹಾಗೂ ಮಲೆಯಾಳಂ ಎರಡು ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದೆ. ಮಲಯಾಳಂನಲ್ಲಿ ಹಾಡು ಬರೆಸಲು ಆದಿ ಅವರನ್ನು ಪರಿಚಯಿಸಿದ್ದು ನನ್ನ ಗೆಳೆಯ ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್ ರಾಜ್. ಕಾಶಿಯಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಅದನೆಲ್ಲಾ ಸಾಧ್ಯ ಮಾಡಿದ್ದ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರಿಗೆ ಧನ್ಯವಾದ. ಆಲ್ಲಿನ 84 ಘಾಟ್ ಗಳಲ್ಲೂ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಇನ್ನೂ ನಾಯಕ – ನಾಯಕಿ ನನ್ನ ಮಕ್ಕಳಿದಂತೆ. ಝೈದ್ ಖಾನ್ ನನ್ನ ಬಳಿ ಬಂದು ನಿರ್ದೇಶನ ಮಾಡಬೇಕೆಂದರು. ನಾನು ಅವರಿಗೆ ನೀವು ಹೆಸರಾಂತ ರಾಜಕಾರಣಿ ಮಗ. ನಿಮಗೆ ನಾನು ನಟನೆ ಕಲಿಸಬೇಕಾದರೆ ಸ್ವಲ್ಪ ಕಷ್ಟವಾಗಬಹುದು ಅಂದೆ. ಅದಕ್ಕೆ ಅವರು ಚಪ್ಪಲಿ ಬಿಟ್ಟು ಕೆಳಗೆ ಕುಳಿತು, ನೀವು ಹೇಳಿ ಕೊಟ್ಟಿದ್ದನ್ನು ಮಾಡುತ್ತೇನೆ ಎಂದರು .ಹಾಗೆ ಮಾಡಿದರು. ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡಾಗಲೇ ಗೆದ್ದರು. ಅದರ ಫಲಿತಾಂಶ ಈಗ ಗೊತ್ತಾಗುತ್ತಿದೆ. ಸೋನಾಲ್ ಅವರ ಅಭಿನಯ ಕೂಡ ಚೆನ್ನಾಗಿದೆ. ಸೆನ್ಸಾರ್ ಕೂಡ ಮುಗಿದಿದೆ. ಸದ್ಯದಲ್ಲೇ “ಬನಾರಸ್” ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ಜಯತೀರ್ಥ.

ಇದು ನನ್ನ ಡ್ರೀಮ್ ಪ್ರಾಜೆಕ್ಟ್. ಈ ಕನಸನ್ನು ನನಸು ಮಾಡಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದೇನೆ. ಈ ನನ್ನ ಕನಸಿಗೆ ಆಸರೆಯಾಗಿದ್ದು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರು. ತಿಲಕ್ ಸರ್ ನನ್ನ ಗಾಡ್ ಫಾದರ್‌. ಬಾಂಬೆಗೆ ನನ್ನ ಕರೆದುಕೊಂಡು ಹೋಗಿ, ಆಕ್ಟಿಂಗ್ ಸ್ಕೂಲ್ ಗೆ ಸೇರಿಸಿ, ನಂತರ ಈ ಚಿತ್ರವನ್ನು ನಿರ್ಮಾಣ ಮಾಡಿದರು. ನಮ್ಮ “ಬನಾರಸ್” ಅನ್ನು
ಪ್ಯಾನ್ ಇಂಡಿಯಾ ಚಿತ್ರವಾಗಿಸಿ ಎಲ್ಲಾ ಕಡೆ ಬಿಡುಗಡೆ ಮಾಡುತ್ತಿದ್ದಾರೆ.‌ ನಿರ್ದೇಶಕ ಜಯತೀರ್ಥ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಸೋನಾಲ್ ಅವರು ಅದ್ಭುತ ನಟಿ. ಇನ್ನು ಇಡೀ ಚಿತ್ರತಂಡದ ಪರಿಶ್ರಮದಿಂದ “ಬನಾರಸ್” ಚೆನ್ನಾಗಿ ಬಂದಿದೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದ ನಾಯಕ ಝೈದ್ ಖಾನ್, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೂ ಧನ್ಯವಾದ ತಿಳಿಸಿದರು.

ನನಗೆ ಇದು ವಿಶೇಷ ಸಿನಿಮಾ. ಧನಿ ಎಂಬ ಪಾತ್ರ ನೀಡಿದ್ದ ಜಯತೀರ್ಥ ಅವರಿಗೆ ಧನ್ಯವಾದ. ಮೋಷನ್ ಪೋಸ್ಟರ್ ರಿಲೀಸ್ ಆದ ಮೇಲೆ ಎಲ್ಲೇ ಹೋದರೂ ಈ ಚಿತ್ರದ ಬಗ್ಗೆ ಕೇಳುತ್ತಿದ್ದಾರೆ. ಝೈದ್ ಅವರ ಅಭಿನಯ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕರಿಗೆ ಹಾಗೂ ಇಲ್ಲಿ ಬಂದಿರುವ ಗಣ್ಯರಿಗೆ ಧನ್ಯವಾದ ಎಂದರು ನಾಯಕಿ ಸೋನಾಲ್ ಮೊಂತೆರೊ.

ನಾನು ಮಂಗಳೂರಿನವನು. ಈಗ ಬಾಂಬೆ ವಾಸಿ. ಚಿತ್ರದ ಕಥೆ
ಇಷ್ಟವಾಯಿತು. ಸಿನಿಮಾ ಮಾಡಿದ್ದೇನೆ. ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್.

ಚಿತ್ರದಲ್ಲಿ ಪಾತ್ರ ಮಾಡಿರುವ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್,
ಛಾಯಾಗ್ರಾಹಕ ಅದ್ವೈತ ಹಾಗೂ ಮಲೆಯಾಳಂ ಗೀತರಚನೆಕಾರ ಆದಿ ಅವರು “ಬನಾರಸ್” ಬಗ್ಗೆ ಮಾತನಾಡಿದರು.

Post Comment

You May Have Missed